ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್ : ಒಂದು ವಿಭಿನ್ನ ಕೃತಿ.
ಸಮುದಾಯಗಳ ಚರಿತ್ರೆ ಬರೆಯುದೆಂದರೆ ಜೇನುಗೂಡಿಗೆ ಕೈಯಿಕ್ಕುವ ಪರಿಯೆಂದೇ ನನ್ನ ಭಾವನೆ ಜಾತಿ, ವರ್ಗ, ಸಮುದಾಯಗಳ ಮೇಲಿನ ಬರವಣಿಗೆಗಳು ಅನೇಕ ಸಂಗತಿಗಳನ್ನು ಆಗ್ರಹಿಸುತ್ತವೆ. ಅವುಗಳ ಹಿಂದೆ ಮತ್ತು ಮುಂದೆ ಅನೇಕ ವಿದ್ಯಮಾನಗಳು ಸಂಚರಿಸಿ, ಸುತ್ತಿಕೊಂಡು ಅತ್ಯಂತ ಎಚ್ಚರದಿಂದ ಅವುಗಳನ್ನು ಹಿಂಬಾಲಿಸುತ್ತವೆ. ಪ್ರತೀ ಚರಿತ್ರೆಗಳೂ ಕೂಡ ವರ್ತಮಾನದ ಜರೂರನ್ನು ಆಗ್ರಹಿಸುತ್ತವೆ. ಮೊತ್ತ ಮೊದಲನೆಯದಾಗಿ ಅಂತಹ ಜರೂರುಗಳು ವರ್ತಮಾನವೆಂಬ ಕಾಲದೇಶ, ಅಧಿಕಾರ ಪ್ರಶ್ನೆ ಮೊದಲಾದವುಗಳ ಮೇಲೆ ಕೂಡಾ ಆಧರಿಸಿರುತ್ತವೆ. ಎಲ್ಲಾ ಬಗೆಯ ಚರಿತ್ರೆಗಳೂ ಕೂಡಾ ಈ ತೆರನಾಗಿ ತಮ್ಮದೇ ತರ್ಕಗಳನ್ನು ಆಧರಿಸಿ, ಪೂರ್ವಾಗ್ರಹ, ನಿಹಿತ ಹಿತಾಸಕ್ತಿಗಳನ್ನು ಹೊಂದಿಯೇ ಸಾಗುತ್ತದೆ. ತಥಾಕಥಿತ ಆಧುನಿಕ (ಮಾಡರ್ನ್) ಎನ್ನುವ ಯುಗದ ಈ ರೀತಿಯ ಅನೇಕ ಸಂಗತಿಗಳು ಮುಖ್ಯವಾಗಿ ರಾಷ್ಟ್ರ, ಸಮುದಾಯ, ಜಾತಿ, ವರ್ಗ ಮುಂತಾದ ಗುರುತುಗಳು ಮತ್ತು ಅವುಗಳ ಮೇಲಿನ ರಾಜಕಾರಣದಿಂದ ಹೊರತಾಗಿರದೇ ಅವುಗಳಿಗೆ ಪೂರಕವಾದ ಕಥನ ಮತ್ತು ಮಾನ್ಯತೆಗಳನ್ನು ಆಗ್ರಹಿಸುತ್ತವೆ. ಯುರೋಪಿನ ಒಬ್ಬ ಪ್ರಸಿದ್ಧ ಚರಿತ್ರಕಾರನಂತೂ, ‘‘ಚರಿತ್ರೆಯೆಂದರೆ ಮಾನ್ಯತೆ, ಮಾನ್ಯತೆ ಗಿಟ್ಟಿಸುವ ಪ್ರಕ್ರಿಯೆ’’ಯೆಂದೇ ಅರುಹಿರುವುದೂ ಕೂಡಾ ಸಮಂಜಸವೂ ಆಗಿದೆ. ಪ್ರತೀ ಚರಿತ್ರೆಯೂ ನಿರ್ಮಾಣ ಮತ್ತು ಪ್ರತೀ ಚರಿತ್ರೆಗಳೂ ನಿರ್ಮಾಣಕ್ಕೆ ತಕ್ಕುದಾದ ತರ್ಕಗಳನ್ನೂ ಕೂಡಾ ಹೊಂದಿರುತ್ತವೆ. ಒಂದು ರೀತಿ ಇಂತಹ ನಿರ್ಮಾಣಗಳು ಮಧ್ಯಯುಗದಲ್ಲಿ ಮತ್ತು ಆರಂಭದ ಮಧ್ಯಯುಗದಲ್ಲಿ ರೂಪುಗೊಂಡ ‘ಚರಿತ’ (ಉದಾಹರೆಣೆಗೆ ಹರ್ಷಚರಿತ)ಗಳ ರೀತಿಯಲ್ಲೇ ಸಾಗುತ್ತವಾದ್ದರಿಂದ ನಾವು ತುಸು ಮಾರ್ಪಡಿಸಿ ಇವುಗಳನ್ನು ‘ನವ ಚರಿತ’ಗಳೆಂದೇ ಗ್ರಹಿಸಬಹುದಾಗಿದೆ ಕೂಡಾ. ಸಮಾಜವೊಂದು, ಜಾಗತಿಕ ವ್ಯವಸ್ಥೆಯೊಂದು ತೀವ್ರ ತೆರನಾದ ಬದಲಾವಣೆ, ಸ್ಥಿತ್ಯಂತರಗಳನ್ನು ಹೊಂದಿ ಅದು ವರ್ಗ, ಸಮುದಾಯಗಳ ಮೇಲೆ ಬೀರುವ ಪರಿಣಾಮಗಳೂ ಕೂಡಾ ಸಮುದಾಯಗಳ ಅನನ್ಯತೆ ಮತ್ತು ಗುರುತುಗಳ ಚರಿತ್ರೆ ಮತ್ತು ಅಂತಹ ನ್ಯಾಯಬದ್ಧತೆಯ ಕಥನಗಳನ್ನು ಆಗ್ರಹಿಸಿ ಆಶ್ರಯಿಸುತ್ತವೆ. ಅಂತೆಯೇ ಪ್ರತೀ ಚರಿತ್ರೆ, ಚಾರಿತ್ರಿಕ ಕಥನಗಳೂ ಕೂಡಾ ಅಧಿಕಾರ ಪ್ರಶ್ನೆಯ ಮೇಲೆಯೇ ನಿಂತಿರುವುದಾಗಿದೆ. ಉದಾಹರಣೆಗೆ ವಿಶೇಷವಾಗಿ ಭಾರತದಲ್ಲಿ ಜಾಗತೀಕರಣದ ಪ್ರಕ್ರಿಯೆ ನಡೆದ 1990ರ ದಶಕದ ನಂತರ ಜಾಗೃತಗೊಂಡ ‘ದಲಿತ’ ಗುರುತು,ಸಕ್ರಿಯ ರಾಜಕಾರಣ ,ದಲಿತ ಚಳುವಳಿಯ ಕಾರಣದಿಂದ ನಿರ್ಮಿತವಾಗಿತ್ತಾದರೂ ಕೂಡಾ ಚರಿತ್ರೆ ಹಾಗೂ ತಮ್ಮದೇ ಆದ,ತಮಗೆ ಬಹಳ ಮುಖ್ಯವಾದ ಆದ ವೈಯುಕ್ತಿಕ ಚರಿತ್ರೆಯ ಕಥನದಿಂದಲೂ ಕೂಡಾ ಅವು ಏರ್ಪಡುತ್ತವೆ. ಅವು ವರ್ತಮಾನದ ಅಗತ್ಯತೆಗಳನ್ನೂ ಕೂಡಾ ಅದರಿಂದ ಪೂರೈಸಿಕೊಳ್ಳುತ್ತವೆÉ. ಭಾರತದಲ್ಲಿನ ಎಲ್ಲಾ ಜಾತಿ, ಸಮುದಾಯಗಳ ಚರಿತ್ರೆಗಳೂ ಸಹ ಇದೇ ತೆರನಾದುದು.
ಹೆಚ್ಚಿನ ಜಾತಿ ಮತ್ತು ಸಮುದಾಯಗಳ ಚಾರಿತ್ರಿಕ ಮತ್ತು ಸಾಂಸ್ಕøತಿಕ ಶೋಧ, ಅದು ಪಿ.ಹೆಚ್.ಡಿ ಆಗಿರಬಹುದು ಅಥವಾ ಸಾಮಾನ್ಯ ಪ್ರಬಂಧವಾಗಿರಬಹುದು. ಅವುಗಳನ್ನು ಆ ಸಮುದಾಯದ, ಜಾತಿಯ ಸದಸ್ಯರೇ ಕೈಗೊಂಡು ನಿರ್ವಹಿಸುವುದು ವಾಡಿಕೆ. ಕರ್ನಾಟಕದ ಹೆಚ್ಚಿನ ವಿಶ್ವವಿದ್ಯಾನಿಲಯದಲ್ಲಿ ನಡೆದ, ನಡೆಸುವ ಈ ರೀತಿಯ ಸಮುದಾಯದ ಸಂಪ್ರಬಂಧಗಳನ್ನು ಅವುಗಳಿಗೆ ಸೇರಿದವರೇ ಸಿಂಹಪಾಲು ಕೈಗೊಂಡಿದ್ದನ್ನು ಕೂಡಾ ಗಮನಿಸಬಹುದಾಗಿದೆ. ಒಂದು ರೀತಿ ಅಸ್ಖಲಿತ ಸತ್ಯದ ರೂಪದಲ್ಲಿ ಅದು ಜಾರಿಯಾಗುವುದನ್ನೂ ಕೂಡಾ ಗಮನಿಸಬಹುದು. ಅಂತಹ ಸಮುದಾಯದ ಬಗೆಗಿನ ಚರಿತ್ರೆಯನ್ನು ಬರೆದರೆ ಅಕಾಡಮೀಶಿಯನ್ಸ್ ಎಂದು ಕೇಳಿಕೊಳ್ಳುವ ಜನರಿಂದ ಹಿಡಿದು ಸಮುದಾಯದ ಸಾಮಾನ್ಯ ಜನ ಹಾಗೂ ಪ್ರಮುಖರವರೆಗೆ ಎಸಗುವ ‘ಪ್ರಶ್ನೆ’ ನಮ್ಮ ಸಮುದಾಯಕ್ಕೆ ಸೇರಿರದ ಒಬ್ಬ ವ್ಯಕ್ತಿಗೆ ನಮ್ಮ ಬಗ್ಗೆ, ನಮ್ಮ ಸಮುದಾಯದ ಬಗ್ಗೆ ಏನು ಗೊತ್ತುಂಟು ? ಅಥವಾ ಅವನು ಏನು ಬರೆಯಬಲ್ಲ, ಬಂಜೆಗೇನು ಗೊತ್ತು ಹೆತ್ತ ‘ನೋವು’? ಎಂಬ ರೀತಿಯ ವ್ಯಂಗ್ಯ ಉಢಾಫೆಯವರೆಗೂ ಕೂಡಾ ಅದು ಸಾಗುತ್ತದೆ. ಯಾವುದೇ ಜ್ಞಾನ ಶಿಸ್ತುಗಳ ಅಧ್ಯಯನ, ಅಧ್ಯಾಪನ ಯಾರು ಬೇಕಾದರೂ ಮಾಡಬಹುದು. ಆದರೆ ಕನಿಷ್ಠ ಒಂದು ಜ್ಞಾನಶಿಸ್ತಿನ ಜತೆ ವ್ಯವಹರಿಸಲು ಬೇಕಾಗುವ ಪ್ರಾಥಮಿಕ ಸಂಗತಿಗಳನ್ನು ಅವರು ತಿಳಿದು ಕೊಂಡಿರಬೇಕಾಗುತ್ತದೆ. ಇದಷ್ಟೇ ಪೂರ್ವಾವಶ್ಯಕತೆಯಾಗಿರುತ್ತದೆ. ಅಂತೆಯೇ ದಾಮೋದರ ಧರ್ಮಾನಂದ ಕೊಸಾಂಬಿ ಗಣಿತಜ್ಞ ಎನ್ನುವುದಕ್ಕಿಂತ ಹೆಚ್ಚಾಗಿ ಚರಿತ್ರಕಾರ ಎಂದೆನಿಸಿಕೊಂಡಿದ್ದು. ಅದೇ ರೀತಿ ಆಯ್ದುಕೊಂಡ ವಿಷಯದ ಮೇಲೆ ಪ್ರೀತಿ, ಆಸ್ಥೆ ಕೂಡಾ ಬೇಕಾಗುತ್ತದೆ. ಈ ನೆಲೆಯಲ್ಲಿ ವೈಯುಕ್ತಿಕವಾಗಿ ನನ್ನ ಅಭಿಪ್ರಾಯ ಏನೆಂದರೆ, ಯಾವುದೇ ಒಂದು ಜಾತಿ, ಸಮುದಾಯದ ಚರಿತ್ರೆ ಅಥವಾ ಕಥನವನ್ನು ಸರಿಸುಮಾರು ವಸ್ತುನಿಷ್ಠವಾಗಿ ಚಿತ್ರಿಸಬೇಕೆಂದರೆ ಅದಕ್ಕೆ ಸ್ವಲ್ಪಮಟ್ಟಿಗಾದರೂ ಜ್ಞಾನಶಿಸ್ತುಗಳನ್ನು ತಿಳಿದು ಕೊಂಡಿರುವಂತಹ ವ್ಯಕ್ತಿಯ ಯೋಗ್ಯತಾಪತ್ರಗಳೇ ಸಮರ್ಪಕ ಎಂಬುದು. ಇಂತಹ ವಿದ್ವಾಂಸರು ರಚಿಸುವ ಕಥನಗಳು ಸಮುದಾಯ ಆಗ್ರಹಿಸುವ ಅವರನ್ನು ಬಂಧಿಸುವ ಆಗ್ರಹಗಳನ್ನು ಮೀರಿ ನಿಂತು ತಕ್ಕಮಟ್ಟಿನ ವಸ್ತುನಿಷ್ಠತೆಯಿಂದ ಸಂವಾದಕ್ಕೆ ಅಣಿಯಾಗುತ್ತವೆ. ಸಂಪೂರ್ಣ ವಸ್ತುನಿಷ್ಠತೆ ಯಾರಿಗೂ ಕೂಡಾ ಸಾಧ್ಯವಿಲ್ಲ. ಗತ ಬೇರೆ, ಚರಿತ್ರೆ ಬೇರೆ. ಗತ ಅಥವಾ ಪ್ರಕರಣ ಯಾವಾಗಲೂ ಕೂಡಾ ಒಂದೇ ಆಗಿರುತ್ತದೆ.ಆದರೆ ವಿವಿಧ ಚರಿತ್ರೆಗಳು ಕೇವಲ ನಿರ್ಮಾಣಗಳು. ಇಲ್ಲಿ ಈ ತಕ್ಕಮಟ್ಟಿನ ವಸ್ತುನಿಷ್ಠತೆ ಅಂದರೆ, ಈ ವಿದ್ವಾಂಸರುಗಳು ಪ್ರಶ್ನಿಸಿ, ವಿಚಾರಿಸಿ, ತುಲನೆ ಮಾಡಿ ವಿಶ್ಲೇಷಿಸಿ ಹಾಗೂ ಇನ್ನೂ ಕೆಲವು ಸಾಧನಗಳನ್ನು ಬಳಸಿ ನಿರ್ದಿಷ್ಟ ಪಡಿಸುವ ಸಾಪೇಕ್ಷ ಕ್ರಮವೂ ಹೌದಾಗಿದೆ.
‘ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್’ ಈ ರೀತಿಯದಾದ ಒಂದು ಪ್ರಯತ್ನ. ಇದರ ಲೇಖಕರು ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ಸುರೇಂದ್ರ ರಾವ್. ಈ ಕೃತಿ ಮೂಲತಃ ಮಂಗಳೂರಿನ ಬಂಟ್ಸ್ ಫೌಂಡೇಶನ್, ರಾವ್ ಅವರಲ್ಲಿ ವಿನಂತಿಸಿ ಬರೆಸಿದ ಯೋಜನೆ. ಆದರೆ ಯಾವುದೇ ಆಗ್ರಹಗಳಿಲ್ಲದೆ. ಈ ಆಗ್ರಹಗಳು ಎಷ್ಟು ಸಮಸ್ಯೆ ಎಂಬ ಅರಿವಿದ್ದ ಕಾರಣದಿಂದಲೇನೇ ರಾವ್ ಅವರು ಅಂತಹ ಆಗ್ರಹಗಳಿಲ್ಲದ ಕಾರಣದಿಂದ ಒಪ್ಪಿದ್ದೆಂದು ಇಡೀ ಪುಸ್ತಕ ಕೂಡಾ ನಿರೂಪಿಸುತ್ತದೆ. ಅಂತಹ ಸಮುದಾಯ ಕಥನದ ಗುರುತು ಮತ್ತು ರಾಜಕಾರಣದ ಅರಿವಿದ್ದ ಕಾರಣ ಕೂಡಾ ಇಂತಹ ಉತ್ತಮ ಪುಸ್ತಕ ಮೂಡಿದೆ. ಈ ಬಂಟರು ಯಾರು? ಎನ್ನುವ ಪ್ರಶ್ನೆಯಿದ್ದಾಗ್ಯೂ ಕೂಡಾ, ‘ಬಂಟ’ರೆನ್ನುವ ಸಮುದಾಯದ ಕುರಿತು ಬಂದಿರಬಹುದಾದ ಒಂದು ಅತ್ಯುತ್ಕøಷ್ಟ ಪುಸ್ತಕ ಇದಾಗಿದೆ. ಉಳಿದಂತೆ ಇದುವರೆಗೆ ಬಂದಿರುವ ಹೆಚ್ಚಿನ ಪುಸ್ತಕಗಳು ಪ್ರಶ್ನೆಯನ್ನು ಹೊಂದಿಯೇ ಇಲ್ಲ, ಬದಲು ಬರೀ ಉತ್ತರದ ಕಣಜಗಳಾಗಿವೆ.‘ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್’ ಪುಸ್ತಕ ಉತ್ತರಗಳಿಗಿಂತ ಮುಖ್ಯವಾಗಿ ಹಲವು ಕೋನಗಳಲ್ಲಿ ಪ್ರಶ್ನೆಯನ್ನು ಎತ್ತುತ್ತದೆ. ಒಂದು ಹಂತದಲ್ಲಿ ಈ ಪ್ರಶ್ನೆಗಳೇ ಮುಖ್ಯ ಉತ್ತರಗಳಿಗಿಂತ. ಈ ಕೃತಿ, ಬರೆಸಿದ ಕೃತಿಗಿಂತ ಭಿನ್ನವಾಗಿದೆ. ಬರೆಸುವ ಕೃತಿಗಳು ಹಲವು ಅಪಾಯಗಳನ್ನು ಹೊಂದಿರುತ್ತವೆ. ಮುಖ್ಯವಾಗಿ ಯಾರು ಬರೆಯಿಸುತ್ತಾರೆಯೋ ಅವರ ತಾಳಗಳಿಗೆ ಹೆಜ್ಜೆ ಹಾಕುವ ಅಪಾಯ. ಅಂತಹ ಕೃತಿ ಸಿರಿ, ವೈಭವ, ಪ್ರಚಾರ ಇತ್ಯಾದಿಗಳನ್ನು ಹೊಂದಿ, ಸತ್ಯದಿಂದ, ಸತ್ಯದ ಬಹುತ್ವದಿಂದ ವಿಮುಖವಾಗಿರುತ್ತದೆ. ಇದು ಸತ್ಯದ ಶೋಧ ಮತ್ತು ಪ್ರಶ್ನೆಯ ಗುರಿಯನ್ನು ಸಂಪೂರ್ಣ ವಿಮುಖವಾಗಿಸಿತು ಎನ್ನುವುದಕ್ಕಿಂತಲೂ, ಅಂತಹ ಮಧ್ಯಮ ಮಾರ್ಗದಿಂದಲೇ ಅವುಗಳನ್ನು ನಿರ್ದಾಕ್ಷಿಣ್ಯವಾಗಿ ವಿಮುಖಗೊಳಿಸಿತು. ಬಂಟರ ಬಗೆಗೆ ಇದುವರೆಗೆ ಬಂದ ಹೆಚ್ಚಿನ ಬರಹ ಮತ್ತು ತಥಾಕಥಿತ ಅಧ್ಯಯನಗಳ ಸಮಸ್ಯೆ ಇರುವುದೇ ಇಲ್ಲಿ. ಈ ರೀತಿಯ ಅಧ್ಯಯನವನ್ನು ನಡೆಸಿದ ಹೆಚ್ಚಿನ ಬಂಟ ಸಮಾಜ ಬಾಂಧವರು ‘ಪದ್ಮಪತ್ರ ಮಿವಾಂಬಸಾ’ ಅಂದರೆ ಅಂಟಿಯೂ ಅಂಟದ ಹಾಗೆ ವರ್ತಿಸಲೇ ಇಲ್ಲ, ಬದಲು ಅಂಟಿಕೊಂಡರು. ಇದಲ್ಲದೆ ಯಾರೂ ಕೂಡಾ ಪ್ರಶ್ನೆಯನ್ನೇ ಮಾಡಲಿಲ್ಲ. ಹೀಗೆ ‘ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್’ ಕೃತಿಯ ಮೊತ್ತಮೊದಲ ಶ್ರೇಯವೇ ಅದು ಅಕಡಮಿಕ್ ಆಗಿ ಮತ್ತು ಸಾಮಾನ್ಯ ತರ್ಕಗಳಲ್ಲಿ ಪ್ರಶ್ನೆಗಳನ್ನು ಕೇಳಿದ್ದು ಹಾಗೂ ಬಂಟ ಎನ್ನುವ ಕಲ್ಪಿತ ಸಮುದಾಯದ ನಿರ್ಮಾಣ (ಮೇಕಿಂಗ್)ವನ್ನು ಸಂದೇಹಿಸದ್ದೇ ಆಗಿದೆ.
ಇದುವರೆಗಿನ ಬಂಟರ ಬಗೆಗಿನ ಹೆಚ್ಚಿನ ಬರವಣಿಗೆಗಳು ಅಕ್ಷರಶಃ ವಿಜೃಂಭಣೆಯೇ ಆಗಿವೆ. ಈ ಕಾರಣದಿಂದ ಅವು ಚರಿತ್ರೆಯ ಜತೆಗೆ ಪುರಾಣವನ್ನೂ ಬಳಸಿಕೊಳ್ಳುತ್ತವೆ. ಈ ಕಾರಣದಿಂದಲೇನೇ ಈವರೆಗೆ ಬಂದಿರುವ ಹೆಚ್ಚಿನ ಬರಹಗಳು ಭೂತಾಳಪಾಂಡ್ಯನಿಂದಲೇ ಆರಂಭವಾಗುತ್ತವೆ. ಇಂತಹ ಮಿಥಕಗಳು ಅನೇಕ ಬುಡಕಟ್ಟು ಸಮುದಾಯಗಳ ಒಂದು ವಿಶಿಷ್ಠ ಲಕ್ಷಣವೂ ಹೌದು. ಆಫ್ರಿಕಾದ ಬುಡಕಟ್ಟುಗಳಲ್ಲೂ ಸಹ ಈ ತೆರನಾದ ನಂಬಿಕೆ, ಮಿಥ್ಯಗಳಿವೆ. ಆದರೆ ಆ ನಂಬಿಕೆಗಳನ್ನು ಮೈಥಾಲಜಿಕಲ್ ಮತ್ತು ಆಂತ್ರೊಪೋಮೋರ್ಫಿಕ್ ನೆಲೆಯಲ್ಲಿ ಬಳಸಿಕೊಂಡರಷ್ಟೇ ಅವುಗಳ ಅನ್ವಯ ಮತ್ತು ವಿಶ್ಲೇಷಣೆಯಿಂದ ಸರಿಸುಮಾರಾದ ಒಂದು ಜನಪದದ, ಸಮುದಾಯದ ವಿಕಾಸದ ವಿನ್ಯಾಸ ಒದಗಿಬರುತ್ತದೆ. ಇಲ್ಲದಿದ್ದರೆ ಕಾಣ್ಕೆ ಮತ್ತು ಜಾಣ್ಮೆ ಎರಡೂ ಕೂಡಾ ಹಳ್ಳ ಹಿಡಿಯುತ್ತದೆ. ಅದು ಅತ್ಯಂತ ಜಾಣ ಚಿಂತಕನಿಗಷ್ಟೇ ಸಾಧ್ಯ. ಇನ್ನೂ ದೊಡ್ಡ ಜಾಣ್ಮೆಯೆಂದರೆ ಅಂತಹ ಮಿಥ್ಯವನ್ನು ದುಡಿಸಿಕೊಳ್ಳಲು ಕಷ್ಟವಾದರೆ ಅವುಗಳನ್ನು ಸಂಪೂರ್ಣ ವರ್ಜಿಸುವುದೂ ಆಗಿದೆ. ಇಲ್ಲಿ ಕೂಡಾ ‘ಬಂಟ್’ ಎನ್ನುವ ಕಲ್ಪಿತ ಸಮುದಾಯ ಅಥವಾ ಗುರುತು ಅತ್ಯಂತ ನಿಚ್ಚಳವಾಗಿ ಆಧುನಿಕ, ಆಧುನಿಕತೆಯ ಸಂದರ್ಭದಲ್ಲಿ ಒಡಮೂಡಿರುವ ಕಾರಣ, ಲೇಖಕ ಅಂತಹ ಕ್ಲಿಷ್ಟವಾದ ಕೆಲಸಕ್ಕೇನೇ ಕೈ ಹಾಕದೇ ಈ ಗುರುತನ್ನು ಅಥವಾ ಅದರ ಅಭಿವ್ಯಕ್ತಿಯಾಗಿರುವ ಸಮುದಾಯದ ಚರಿತ್ರೆಯನ್ನು 19ನೆಯ ಶತಕದಿಂದಲೇ ಚರ್ಚಿಸಿರುವುದೂ ಕೂಡಾ ಅತ್ಯಂತ ಯೋಗ್ಯವಾದುದೂ ಆಗಿದೆ. ಅಂತಹ ಪ್ರಾಚೀನ ಚರಿತ್ರೆಯೊಂದಿಗೆ ಜತಕು ಹಾಕುವ ಕ್ರಮ ರಾಜಕೀಯ ಭಾಷಣದಲ್ಲೋ ಅಥವಾ ಜಾತಿ, ಸಮುದಾಯದ ಸಮಾವೇಶದಲ್ಲೋ ಲಾಯಕ್ಕು ಎಂಬ ಪ್ರಜ್ಞಾವಂತಿಕೆ ಕೂಡಾ ಲೇಖಕರಿಗಿರುವುದರಿಂದಲೇನೇ ಈ ಕೃತಿ ಒಂದು ಪ್ರೌಢ ಬರವಣಿಗೆಯ ಉದ್ಯಮವಾಗಿ, ಸಂವಾದವಾಗಿ ನಮ್ಮ ಮುಂದಿದೆ. ಪ್ರಾಚೀನಕಾಲದಲ್ಲಿ ಪೃಥ್ವಿಯಲ್ಲೊದಗಿದ ಘಟವು... ಎನ್ನುವಲ್ಲಿಂದ ಬಂಟರ ಅಥವಾ ಯಾವುದೇ ಒಂದು ಸಮುದಾಯ, ಜಾತಿಯ ಚರಿತ್ರೆಯನ್ನು ಕಟ್ಟುವುದು ಸಾಧ್ಯವಿಲ್ಲ ಎನ್ನುವುದೂ ಕೂಡ ಕೃತಿಯ ಆಶಯವಾಗಿ ನಮಗಿಲ್ಲಿ ಕಾಣಿಸುತ್ತದೆ. ಯಾವುದೇ ಒಂದು ಸಮುದಾಯವನ್ನು ಎಲ್ಲಿಯವರೆಗೆ ಎಳೆಯಬಹುದು ಎನ್ನುವ ಪ್ರಶ್ನೆಗೆ ಬರೀ ಆಧುನಿಕ ಕಾಲಘಟ್ಟದವರೆಗೆ ಮಾತ್ರವೆನ್ನುವ ಉತ್ತರವನ್ನೂ ‘ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್’ ಕೃತಿ ನೀಡುತ್ತದೆ. ಈ ಬಂಟ್ ಎನ್ನುವ ಒಂದು ಗುರುತು ಯುರೋಪಿನ ವಸಾಹತುಶಾಹೀ ಪ್ರಕ್ರಿಯೆ ನೀಡಿದ ಕೊಡುಗೆಯಾಗಿ ಅದು ಉಂಟುಮಾಡಿದ ಆಧುನಿಕತೆ ಮತ್ತದರ ವಿವಿಧ ಮಾಧ್ಯಮಗಳ ಯೋಗದಾನವೆಂದೇ ಕೃತಿ ಗ್ರಹಿಸುತ್ತದೆ. ಮುಖ್ಯವಾಗಿ 1890ರ ನಂತರ ಬ್ರಿಟಿಷ್ ಸಾಮ್ರಾಜ್ಯಶಾಹಿ ಯಾವಾಗ ಜನಗಣತಿಯನ್ನು ಆರಂಭಿಸಿತೋ, ಆಗ ಹೇಗೆ ವಿವಿಧ ಜಾತಿ ಸಮುದಾಯಗಳು ಪ್ರತಿನಿಧೀಕರಣವನ್ನು ಕಡೆದು ಈಗ ಇರುವ ತಕ್ಕಮಟ್ಟಿನ ಔಪಚಾರಿಕವಾದ ಜಾತಿ ಎನ್ನುವ ಚೌಕಟ್ಟು ಅಥವಾ ವ್ಯವಸ್ಥೆಯಾಗಿರುವ ಮಟ್ಟದ ಬೀಜರೂಪವನ್ನು ಪಡೆದವೆಂಬುದನ್ನೇ ಲೇಖಕರ ಪ್ರಮುಖ ವಾದಗಳನ್ನಾಗಿ ನಾವು ಗ್ರಹಿಸಬಹುದಾಗಿದೆ. ಈ ಕೃತಿಯಲ್ಲಿ ಲೇಖಕರ ‘ಬಂಟ್’, ಬಂಟರ ಸಮುದಾಯದ ನಿರ್ಮಾಣದ ಆರಂಭದ ಹಂತವನ್ನು ಕರಾವಳಿಯಲ್ಲಿ ಎಲ್ಲಾ ಸಮುದಾಯಗಳಿಗಿಂತ ಮೊದಲು ಅಂದರೆ ತಥಾಕಥಿತ ಬಂಟರ ಸಮುದಾಯದ ಜನ ಹಳ್ಳಿಗಳಿಂದ ಬಂದು 20ನೆಯ ಶತಮಾನದಾರಂಭದಲ್ಲಿ ನಗರಗಳಲ್ಲಿ ಓದಲೋಸುಗ ಹಾಸ್ಟೆಲ್ (ಬಂಟ್ಸ್ ಹಾಸ್ಟೆಲ್)ಗಳಲ್ಲಿ ನೆಲೆನಿಂತು ಏಕಛತ್ರಿಕೆಯನ್ನು ಪಡೆಯುವುದರಿಂದಲೇ ಉಂಟಾಯಿತು ಎನ್ನುವ ವಾದವೂ ಕೂಡಾ ಪುಷ್ಠಿಯೋಗ್ಯವಾಗಿದೆ. ಲೇಖಕರಿಗೆ 19ನೆಯ ಶತಮಾನದ ಉತ್ತರಾರ್ಧ ಮತ್ತು 20ನೆಯ ಶತಮಾನದ ಪ್ರಥಮಾರ್ಧದ ಸಮಾಜೋ-ಭೌತಿಕ ಕಾಲದೇಶ ಮತ್ತು ಪರಿಸ್ಥಿತಿಯಿಂದ ಬಂಟರು, ‘ಬಂಟ’ಎನ್ನುವ ಪ್ರಜ್ಞೆ ಮೊಳೆತು ಸಮುದಾಯ ಉಗಮಿಸಿತೇ ಹೊರತು ಭೂತಾಳಪಾಂಡ್ಯನಿಂದಲ್ಲ’ ಎನ್ನುವ ವೈಚಾರಿಕ ತರ್ಕವೇ ಮುಖ್ಯವಾಗುವುದೂ ಕೂಡಾ ಅತ್ಯಂತ ಉಚಿತವೇ ಆಗಿದೆ. ಇಂತಹ ದೃಷ್ಟಿ ಮತ್ತು ತರ್ಕ ಖಂಡಿತವಾಗಿ ಸಾಮಾನ್ಯ ನೆಲೆಯಲ್ಲಿ ಉದ್ಭವವಾಗದೇ. ಅತ್ಯಂತ ಪರಿಣಿತಿಯ, ಓದಿನ ಮತ್ತು ಜ್ಞಾನ ಶಿಸ್ತಿನ ವ್ಯಾಪ್ತಿ ಮತ್ತು ಸ್ವರೂಪದ ಅರಿವಿನಿಂದಲೇ ಉಗಮಗೊಂಡಿರುವಂತದ್ದು ಎನ್ನುವ ಸಂಗತಿಯನ್ನೂ ಕೂಡಾ ನಮಗೆ ಮನದಟ್ಟು ಮಾಡುತ್ತದೆ. ಕುಂದಾಪುರದಿಂದ ಹಿಡಿದು ಕಾಸರಗೋಡಿನವರೆಗೆ ಕರಾವಳಿಯಲ್ಲಿ 20ನೆಯ ಶತಮಾನದ ಪ್ರಥಮಾರ್ಧದಲ್ಲಿ ಉದ್ಭವಿಸಿದ ಬಂಟರ ಹಾಸ್ಟೆಲ್ಗಳೇ ಕ್ರಮೇಣ ಛತ್ರಛ್ಛಾಯೆಗಳಾಗಿ ಸ್ವತಂತ್ರೋತ್ತರ ಭಾರತದಲ್ಲಿ ವಿವಿಧ ಬಂಟರ ಸಂಘಗಳಾಗಿ ರೂಪುಗೊಂಡಿರುವ ಅನುಭವಜನ್ಯ ಸಾಕ್ಯಗಳೂ ಸಹ ‘ಬಂಟ’ ಎನ್ನುವ ಸಮುದಾಯದ ಆಧುನಿಕ ವಿಕಾಸದ ಕಥೆಯನ್ನು ನಮಗೆ ಮನವರಿಕೆ ಮಾಡುವುದು.
‘ಬಂಟ’ ಎನ್ನುವ ಸಮುದಾಯದ ಬಗ್ಗೆ ಕೂಡಾ ಕೃತಿ ಅತ್ಯಂತ ನಿರ್ದಿಷ್ಠವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.‘ಬಂಟರ ಯಾನೆ ನಾಡವರ’ ಎನ್ನುವ ಸಂಯೋಜನೆಯನ್ನು ಅದು ಹೆಚ್ಚಾಗಿ ಗಮನಹರಿಸುವುದಿಲ್ಲ. ಅದು ಚಾರಿತ್ರಿಕವಾದ ದಾಖಲೆ ಮತ್ತು ಮಾಹಿತಿಗಳಿಂದ ಪುಷ್ಠಿಗೊಂಡು ಈ ಜತಕು ಎನ್ನುವುದೇ ಒಂದು ರೀತಿಯ ಅಸಹಜ ಗುರುತು ಎಂಬಂತೆ ಕಂಡಿದೆ. ಅಂದರೆ ಸರಿಸುಮಾರು ಕಾಸರಗೋಡ್ ನಿಂದ ಹಿಡಿದು ಉಡುಪಿಯವರೆಗಿನ ಅಥವಾ ಶಾಂಭವೀ ನದಿ ತೀರದ ಬ್ರಹ್ಮಾವರದವರೆಗಿನ ಭೂಮಿ ಮತ್ತು ಭಾಷೆಯ ವ್ಯಾಪ್ತಿಯಲ್ಲಿ ಅಂದರೆ ತುಳು ಭಾಷೆಯ ನೆಲೆಯಲ್ಲಿಯೇ ಬಂಟರ ಗುರುತನ್ನು ಅದು ಗ್ರಹಿಸಿದೆ. ಇದು ಸಮಂಜಸವೂ ಕೂಡಾ. ಇದಕ್ಕೆ ಚಾರಿತ್ರಿಕ ಮತ್ತು ಸಾಮಾಜಿಕ ನೆಲೆ ಸಾಕ್ಶ್ಯಗಳಿರುವುದನ್ನೂ, ತುಳು ಭಾಷೆಯ ತಳಹದಿಯಿರುವುದನ್ನೂ ಕೂಡಾ ಅತ್ಯಂತ ಸ್ಪಷ್ಟವಾಗಿ ಕೃತಿ ತಿಳಿಸುತ್ತದೆ. ಅಲ್ಲದೆ ಬಂಟ ಎನ್ನುವ ಶಬ್ದದ ನಿಹಿತತೆ, ನಿರ್ವಚನ ಮತ್ತು ಅದನ್ನು ವಿರಚಿಸಿದ ತುಳು ಭೌತಿಕ ಪರಿಸರದ ನೆಲೆಯಿಂದಲೇ ಅದನ್ನು ಗಮನಿಸಲಾಗಿದೆಯೇ ಹೊರತು 1950ರ ನಂತರ, 1970ರ ಸುಮಾರಿಗೆ ಈ ಏನು ಕುಂದಾಪುರದ ನಾಡವ ಮತ್ತು ತುಳು ಬಂಟ ಎನುವ ಕಲ್ಪಿತ ಸಮುದಾಯಗಳ ಕಸಿಯ ನಂತರದ ‘ಬಂಟ’ ಸಮುದಾಯವನ್ನು ಅನುಲಕ್ಷಿಸದಿರುವುದು ಸಾಧುವೂ ಆಗಿದೆ. ಈ ಕೃತಿಯ ಇನ್ನೊಂದು ಮುಖ್ಯ ಮಗ್ಗುಲೆಂದರೆ 19ನೆಯ ಶತಮಾನದ ಉತ್ತರಾರ್ಧ ಮತ್ತು ಸುಮಾರು 20ನೆಯ ಶತಮಾನದ ಆರಂಭದಲ್ಲಿದ್ದ ಬಂಟರ ಸಮಾಜೋ, ಆರ್ಥಿಕ, ರಾಜಕೀಯ ಸ್ಥಿತಿಯ ಚಿತ್ರಣ. ಇಡೀ ಕರಾವಳಿಯ ಆಧುನಿಕ ಚರಿತ್ರೆಯ ಲೋಪವೆಂದರೆ ಅದು ಬ್ರಾಹ್ಮಣೇತರ ಸಮುದಾಯಗಳನ್ನು ಸುಸಂಧೀಕರಿಸದಿರುವುದೇ ಆಗಿದೆ. ಅದು ಬ್ರಾಹ್ಮಣ ಸಮುದಾಯದ, ಗೌಡ ಸಾರಸ್ವತ ಮತ್ತು ಸಾರಸ್ವತದಂತಹ ಸಮುದಾಯದ ತೊಟ್ಟಿಲುಗಳನ್ನು ಮಾತ್ರ ಘನವೆಂದು ತಿಳಿದು ಮೇಲಕ್ಕೆ ಕಟ್ಟಿದೆ. ಇಡೀ ಕರಾವಳಿಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಗಾಥೆಯೆಂದರೆ ಅದು ಒಂದು ರೀತಿ ಇಂಗ್ಲಿಶ್ ಶಿಕ್ಷಿತ ಜನಿವಾರೀಯ ಕಥನವಾಗಿಯೇ ಗೋಚರಿಸುತ್ತದೆ. ಯಾರೊಬ್ಬ ಅ-ಬ್ರಾಹ್ಮಣ, ಅಸ್ಪøಶ್ಯ, ದೀನ-ದಲಿತ ಅಂತಹ ಗಾಥೆಯಲ್ಲಿ ನಿಲ್ಲಲೂ ಕೂಡ ಜಾಗವಿಲ್ಲದಿರುವಂತಹ ಸ್ಥಿತಿ ನಿರ್ಮಾಣವಾಗಿದೆ ಚರಿತ್ತ್ರೆಯಲ್ಲಿ. ಅದು ಅತ್ಯಂತ ಪ್ರಜ್ಞಾಪೂರ್ವಕ ಬರವಣೆಗೆಯ ಕ್ರಮವೂ ಆಗಿತ್ತು. ಅಂತಹ ಬರವಣಿಗೆ ಯಾರನ್ನ ಬೆರೆಯಬೇಕು? ಯಾರನ್ನು ಸೇರಿಸಬಾರದು? ಯಾರಿಗೆ ಜಾಗ ಕೊಡಬಾರದು? ಯಾರಿಗೆ ಜಾಗ ಕಾಣಿಸಬೇಕು? ಎಂಬಂತಹ ಬರಹಮತ್ತು ಸಂಪಾದನೆಯ ತರ್ಕನಿಯಮಗಳ ಮೇಲೆ ಸಾಗಿದ್ದೂ ಕೂಡಾ ಒಂದು ಕಾರಣ. ಅದು ಸವರ್ಣೀಯತೆ, ಜಾತಿ, ಅಕ್ಷರ ಕಲಿಕೆಯ ಮೀಸಲಾತಿ, ಗರ್ವ, ರಾಜಕಾರಣ ಮುಂತಾದ ಸಂಗತಿಗಳ ಮನೋಸ್ಥಿತಿಗಳ ಅಭಿವ್ಯಕ್ತಿಯಾಗಿಯೂ ಸಹ ಗೋಚರಿಸುತ್ತದೆ. ಆದರ ಕಾರಣದಿಂದ ಕರಾವಳಿಯ ಆಧುನಿಕ ಚರಿತ್ರೆಯೆಂದರೆ ಕೆಲವೇ ಕೆಲವು ನಾಯಕರನ್ನು, ಕೆಲವೇ ಕೆಲವು ಹೋರಾಟಗಾರರನ್ನು ಪದೇ ಪದೇ ಉಲ್ಲೇಖಿಸಿ ಕ್ಲೀಷೆಗೊಳಿಸುವ ಕ್ರಮವಾಗಿಯೂ ಕೂಡಾ ಬೆಳೆಯಿತು. ಅವರನ್ನು ಬಿಟ್ಟರೆ ಚರಿತ್ರೆ ಇಲ್ಲವೇ ಇಲ್ಲ ಎನ್ನುವ ನಿರ್ವಾತವನ್ನೂ ಅದು ಸೃಷ್ಟಿಸಿತು. ಆದರೆ ಈ ಕೃತಿ ಅತ್ಯಂತ ಮನೋಜ್ಞವಾಗಿ ಈ ಕಾಲಘಟ್ಟದಲ್ಲಿ ಕೆಳಸ್ಥರ (ಸಬಾಲ್ಟರ್ನ್)ದ ಚರಿತ್ರೆಯ ಘಟಕಗಳಂತಿರುವ ಬಂಟ ಸಮುದಾಯದ ಅನೇಕ ಪುರುಷ ಮತ್ತು ಮಹಿಳಾ ಸ್ವಾತಂತ್ರ್ಯ ಹೋರಾಟಗಾರರನ್ನು ಸಮಕಾಲೀನ ಬ್ರಿಟಿಷ್ ವರದಿ, ಪತ್ರಾಗಾರ ವರದಿಗಳು, ಯುಗಧರ್ಮ ಮತ್ತು ಮಂಗಳೂರು ಸಮಾಚಾರ ದಂತಹ ಪತ್ರಿಕೆಗಳಿಂದ ಹೆಕ್ಕಿತೆಗೆದು ಪರ್ಯಾಯವಾಗಿ ನಿಲ್ಲಿಸಿ, ಈ ಪರ್ಯಾಯದಿಂದ ಒಂದು ರೀತಿ ಇಡೀ ಕರಾವಳಿಯ ಆಧುನಿಕ ಚರಿತ್ರೆಯ ಸಮಾಜೋರಾಜಕೀಯ ಚರಿತ್ರೆಯನ್ನು ಹೊಸ ಬೆಳಕುಗಳೊಂದಿಗೆ ನೋಡಬೇಕಾದ ಅನಿವಾರ್ಯತೆ ಇದೆಯೇನೋ ಏನ್ನುವ ಸಂಶಯವನ್ನು ಕೂಡ ಹುಟ್ಟು ಹಾಕಿದೆ. ಆ ಕಾಲದ ಪ್ರಮುಖ ಬಂಟ ಉದ್ಯಮಿಗಳು, ಸಮಾಜಸುಧಾರಕರು,ಪಿಲಾಂತ್ರಪಿಸ್ಟ್ಗಳು ಮತ್ತು ಆರಂಭದ ಶಿಕ್ಷಣದ ಅಧ್ವರ್ಯುಗಳನ್ನೂ, ಗಾಂಧೀವಾದಿಗಳನ್ನೂ ಕೂಡಾ ಹೆಸರಿಸಿ ದಾಖಲಿಸಿ ಒಂದು ರೀತಿಯ ಹೊಸ ಸಂವಾದ ಮತ್ತು ಚರಿತ್ರೆಯ ರಚನೆಯ ಬಾಗಿಲನ್ನು ತೆರೆಸಿದೆ.
ಒಟ್ಟಾರೆ ‘ಬಂಟ್ಸ್ ಇನ್ ಹಿಸ್ಟರಿ ಆ್ಯಂಡ್ ಕಲ್ಚರ್’ ಕೃತಿ ಬಹುತೇಕ ಎಲ್ಲಾ ಈ ಮೊದಲಿನ ಬಂಟರ ಬಗೆಗಿನ ಬರಹಗಳಿಗಿಂತ ಭಿನ್ನವಾಗಿ ನಿಂತಿದೆ. ಪುಸ್ತಕದ ನಡುವಿನಲ್ಲಿ ಬರುವ ಅನೇಕ ಗುತ್ತುಗಳ ಮನೆಯ ಚಿತ್ರ, ಅವುಗಳ ಕೆಳಗಿನ ವೈಭವದ ಶೀರ್ಷಿಕೆಯು ಲೇಖಕರ ಕೆಲಸವಲ್ಲವೆಂದೇ ನನ್ನ ಅನಿಸಿಕೆ. ಅದಕ್ಕೆ ಲೇಖಕರ ಪ್ರಜ್ಞಾಪೂರ್ವಕ ಸಮ್ಮತಿಯೂ ಇರಲಿಕ್ಕಿಲ್ಲವೆಂದೇ ನನ್ನ ಭಾವನೆ. ಒಟ್ಟಾರೆ ಪುಸ್ತಕ ಮಿತಿಗಳಿಂದ ಹೊರತಾದುದು ಸಂಪೂರ್ಣವಾಗಿಯೆಂದೂ ಅಲ್ಲ. ಆದರೂ ಕೃತಿಯ ಒಟ್ಟಾರೆ ಆಕೃತಿ ಅತ್ಯಂತ ಶಿಸ್ತುಬದ್ಧ, ತಾರ್ಕಿಕ, ಪ್ರಶ್ನಾಸಹಿತ, ಸಂವಾದಶೀಲೀಯವೆಂದೇ ನನ್ನ ತಿಳುವಳಿಕೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ